ವಿದ್ಯಾ ಕೋಳ್ಯೂರ್ ಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುರಸ್ಕಾರ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜುಲೈ 18 , 2013
|
ಮಂಗಳೂರು: ಯಕ್ಷಗಾನದಲ್ಲಿ ಅಪಾರ ಸಾಧನೆ ಮಾಡಿರುವ ವಿದ್ಯಾ ಕೋಳ್ಯೂರು ಅವರನ್ನು ಕೇಂದ್ರದ ಸಂಗೀತ ನಾಟಕ ಅಕಾಡೆಮಿ 2011ನೆಯ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.
ಇವರು ಯಶೋಧ ಮತ್ತು ಸುಪ್ರಸಿದ್ಧ ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರ ಸುಪುತ್ರಿ ವಿದ್ಯಾ ಕೋಳ್ಯೂರು, ಸೀತೆ, ದಾಕ್ಷಾಯಿಣಿ, ದ್ರೌಪದಿ, ಮಾಯಾ ಶೂರ್ಪನಖಿ, ಮಾಯಾ ಪೂತನಿ, ಸತ್ಯಭಾಮೆ, ದಮಯಂತಿ ಮುಂತಾದ ವೈವಿಧ್ಯಮಯ ಪಾತ್ರಗಳಲ್ಲಿ ಅವರ ತಂದೆಯ ಹಾದಿಯಲ್ಲೇ ಮುನ್ನಡೆದು, ಪ್ರೇಕ್ಷಕರ ಮನ ಮುಟ್ಟಿದ್ದು ಮಾತ್ರವಲ್ಲ, ಕೃಷ್ಣ, ಸುಧನ್ವ ಮುಂತಾದ ಪುರುಷ ಪಾತ್ರಗಳಲ್ಲೂ ಮಿಂಚಿದ್ದಾರೆ.
|
ವಿದ್ಯಾ ಕೋಳ್ಯೂರು
|
ಕನ್ನಡದಲ್ಲಿ ನೂರಾರು ಪ್ರದರ್ಶನಗಳನ್ನು ನೀಡಿದ ವಿದ್ಯಾ ಕೋಳ್ಯೂರು, ದೇಶದ 19 ರಾಜ್ಯಗಳಲ್ಲಿ 340ಕ್ಕೂ ಹೆಚ್ಚು ಪ್ರದರ್ಶನಗಳನ್ನು ಹಿಂದಿ ಭಾಷೆಯಲ್ಲೇ ನೀಡಿದ್ದಾರೆ. ಇತ್ತೀಚೆಗೆ 70 ದಿನಗಳ ಅಮೇರಿಕ ಪ್ರವಾಸ ಕೈಗೊಂಡು, ಅಮೇರಿಕಾದ ಹಲವಾರು ರಾಜ್ಯಗಳಲ್ಲಿ ತಮ್ಮ ಯಕ್ಷ ಮಂಜೂಷ ತಂಡದ 15 ಕಾರ್ಯಕ್ರಮಗಳನ್ನು ನೀಡಿ, ಯಕ್ಷಗಾನ ಪ್ರಾತ್ಯಕ್ಷಿಕೆ ಮುಂತಾದವುಗಳ ಮೂಲಕ, ಅಲ್ಲಿನ ಜನರಲ್ಲಿ ಆಸಕ್ತಿ ಮೂಡಿಸಿ, ಪುನ: ಅಮೇರಿಕಾ ಪ್ರವಾಸ ಕೈಗೊಳ್ಳುವ ಸನ್ನಾಹದಲ್ಲಿ ಇರುವ ಸಮಯದಲ್ಲೇ ಈ ಪುರಸ್ಕಾರ ಬಂದಿದೆ.
ಯಕ್ಷಗಾನಕ್ಕೆ ರಾಷ್ಟ್ರಮಟ್ಟದ ಈ ಪ್ರತಿಷ್ಠಿತ ಪುರಸ್ಕಾರ ಸಂದಿದ್ದು ಇದೇ ಮೊದಲ ಬಾರಿ. ಹಾಗಾಗಿಯೇ ಯಕ್ಷಗಾನದ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು. ಈ ಪುರಸ್ಕಾರ 25000 ರುಪಾಯಿಗಳ ನಗದು, ಸ್ಮರಣಿಕೆ ಇತ್ಯಾದಿಗಳನ್ನು ಒಳಗೊಂಡಿದೆ. ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರು ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದ ತೆಂಕುತಿಟ್ಟು ಯಕ್ಷಗಾನದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಅವರ ಮಗಳು, ವಿದ್ಯಾ ಕೋಳ್ಯೂರು ಯುವ ಪುರಸ್ಕಾರ ಪಡೆದ ಏಕೈಕ ಯಕ್ಷಗಾನ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೃಪೆ : http://www.newskarnataka.com
|
|
|